ಯಾರದು ಈ ತಪ್ಪು ?
ತಪ್ಪು ನನ್ನದೊ ? ನಿನ್ನದೊ ? ತಿಳಿಯುತ್ತಿಲ್ಲ, ತಿಳಿದಾದರೂ ಏನು ಪ್ರಯೋಜನ, ಕಳೆದು ಹೋಗಿದೆ ಆ ಘಳಿಗೆ . ಈ ಮನ ಹೇಳುತ್ತಿದೆ ತಪ್ಪು ನಿನ್ನದೆ ಎಂದು. ನೀನೇಕೆ ಅಷ್ಟೊಂದು ಸಿಂಗರಿಸಿಕೊಂಡು ಮಲ್ಲಿಗೆ ಮುಡಿದು , ಮೆಲ್ಲಗೆ ಎದುರಾದೆ. ಎದುರಾದರೂ ಅಡ್ಡಿಯಿಲ್ಲ , ನೀ ನನ್ನ ನೋಡಬಾರದಿತ್ತು, ಮುಂಗುರುಳ ಮರೆಯಲ್ಲಿ ನಗಬಾರದಿತ್ತು. ನಾನೇನು ಪರಮಹಂಸ ರ ಶಿಷ್ಯ ವಿವೇಕಾನಂದ ಅಲ್ಲ, ಕಲಿಗಾಲದ ಒಂದಂಶ , ಸೋತೆ ಆ ಗೆಜ್ಜೆ ತಾಳಕ್ಕೆ ಹೆಜ್ಜೆಗಳ ಲಯಕ್ಕೆ. ಒಂದು ಸಣ್ಣ ತಿರಸ್ಕಾರದಿಂದ ನೀನಾದರೂ ತಡೆಯಬಹುದಿತ್ತು, ಹುಚ್ಚು ಕುದುರೆ ಏರಿ ಹೊರಟ ನನ್ನ ಮನಸನ್ನ. ಅದು ಹೇಗೆ ಸಾದ್ಯ ಹೇಳು ? ನೀನೇನು ವೈರಾಗ್ಯಮೂರ್ತಿ ಅಕ್ಕ ಮಹಾದೇವಿ ಅಲ್ಲ , ರೆಕ್ಕೆ ಬಲಿತ ಪಾರಿವಾಳ. ಚಡಪಡಿಸಿದೆ ನನ್ನ ನೋಟಕ್ಕಾಗಿ , ಒಡನಾಟಕ್ಕಾಗಿ , ಸಮೀಪಕ್ಕಾಗಿ , ಸಾಂಗತ್ಯಕ್ಕಾಗಿ. ಈಗೀಗ ಅನಿಸುತ್ತಿದೆ, ನಮ್ಮಿಬ್ಬರದೂ ತಪ್ಪು ಇತ್ತೆಂದು. ಜಾತಿಯ ಬೇಲಿ ದಾಟಿ ತಬ್ಬಿಕೊಂಡು ಕೂಡಬಾರದಿತ್ತು ಎಂದು , ಅಂಧಕಾರದ ಮಂಧ ಬೆಳಕಲ್ಲಿ ಕೈ ಕೈ ಹಿಡಿದು ನಡೆಯಬಾರದಿತ್ತು ಎಂದು. ಇರಲಿ ಬಿಡು, ನೋಯಬೇಡ-ನರಳಬೇಡ, ನಿಮ್ಮಪ್ಪ ನೆಟ್ಟ ಮರದ ನೆರಳಲ್ಲಿ ಹಾಯಾಗಿರು. ಮುಂದಿನ ಜನ್ಮದಲ್ಲಿ ಮತ್ತೆ ಹುಟ್ಟಿ ಪ್ರೀತಿಸಿಕೊಳ್ಳೋಣ ಜಾತಿ ಎಂಬ ಪದ ಸತ್ತಿದ್ದರೆ , ಇಲ್ಲವಾದರೆ ಇಲ್ಲ . ಇಂತಿ ನಿನ್ನ ತಪ್ಪಿತಸ್ಥ