ಐತಾರ ಸಂತಿ (ಕಿರು ಲೇಖನ)
ನಾವು ಸಣ್ಣವರಿದ್ದಾಗ ನಮ್ಮೂರಲ್ಲಿ ರವಿವಾರಕ್ಕೊಮ್ಮೆ, ಊರ ಅಗಸಿಯಲ್ಲಿ ದೊಡ್ಡ ಸಂತೆ ಸೇರ್ತಿತ್ತು. ಆ ರೂಢಿ ಈಗ್ಲೂ ಇರ್ಬೋದು. ಅದನ್ನ ನಮ್ ಊರ್ ಕಡೆ ಆಡೋ ಭಾಷೆಯಲ್ಲಿ ಐತಾರ ಸಂತಿ, ಐತಾರ ಸಂತಿ ಅಂತ ಕರೀತಿದ್ರು. ಈ ಸಂತೆಯ ವಿಶೇಷತೆ ಏನು ಅಂದ್ರೆ ನಮ್ಮ ದಿನನಿತ್ಯದ ಜೀವನ ಉಪಯೋಗಕ್ಕೆ ಬೇಕಾದ ಎಲ್ಲ ಸರಕು ಸಾಮಗ್ರಿಗಳು ಒಂದೆ ವೇದಿಕೆಯಡಿ ದೊರಕತಿತ್ತು. ಬಟ್ಟೆ ಬ್ಯಾಗ್ ಚಪ್ಲಿ ಯಿಂದ ಹಿಡಿದು, ಉಪ್ಪು ಖಾರ ಕಾಯಿಪಲ್ಲೇ ವರೆಗೂ ಎಲ್ಲ. ಊರಲ್ಲಿ ಪ್ರತಿ ಏರಿಯಾಗೊಂದು ಕಿರಾಣಿ ಅಂಗಡಿ, ಕೆಲವೆಡೆ ಸ್ಟೇಷನರಿ, ಮತ್ತೆ ಕೆಲವೆಡೆ ಬಟ್ಟೆ ಅಂಗಡಿ ಎಲ್ಲ ಇದ್ರೂ, ನಮಗೆ ಬೇಕಾದಾಗ ಒಂದ್ ಸಿಗ್ತಿತ್ತು, ಇನ್ನೊಂದು ಸಿಗ್ತಿರಲಿಲ್ಲ. ಆದ್ರೆ ಈ ಐತಾರ ಸಂತೆಲಿ ಇದಿಲ್ಲ ಅನ್ನೊ ಹಾಗಿಲ್ಲ ಎಲ್ಲ ಸಿಗ್ತಿತ್ತು. ಹೀಗಾಗಿ ಶ್ರೀಮಂತರು ಬಡೂರು ಅನ್ನೊ ಭೇದಯಿಲ್ದೆ, ಪ್ರತಿ ಮನೆಯಿಂದ ಒಬ್ಬೊಬ್ರು ಹೋಗಿ, ತಮಗೆ ಶಾಕ್ತಾನುಸಾರ ಸಂತಿ ತರ್ತೀದ್ರು. ಇತ್ತೀಚಿನ ವರ್ಷಗಳಲ್ಲಿ ಈ ಮಾಲ್ ಗಳ ಹಾವಳಿ ಶುರು ಆದಾಗಿನಿಂದ ಸಂತೆಗಳ ಸಂಖ್ಯೆ ಕಡಿಮೆ ಆಗ್ತಾ ಬರ್ತಿದೆ.
ಸರಿ ಸ್ವಲ್ಪ ಮುಂದಕ್ಕ ಹೋಗೋಣ. ಈಗ ಎಲ್ರು ಬಿಜಿ, ಬಿಜಿ.. ಪ್ರತಿದಿನ ಮಾರ್ಕೆಟ್ ಗೆ ಹೋಗೋಕ್ ಆಗಲ್ಲ. ವಾರಕ್ಕೆ ಒಮ್ಮೆ ಈ ಸಂತೆಗೊ ಅಥವಾ ಮಾಲ್ ಗೊ ಹೋಗ್ತೀರಾ ಅಂತ ಇಟ್ಕೊಳ್ಳಿ. ನಿಮಗೆ ಏನೇನ್ ಬೇಕೋ ಎಲ್ಲ ತಗೋತೀರಿ, ಒಂದೋ ಎರಡೋ ಬ್ಯಾಗ್ ತುಂಬಿಕೊಂಡು ಮನೆಗ್ ಬರ್ತೀರಿ. ಮನೆಗ್ ಬಂದ್ ತಕ್ಷಣ ನಿರೋ ಅಥವಾ ಚಾ ನೊ ಕುಡಿದು ಮಾಡೋ ಮೊದಲ ಕೆಲಸವೇನ್ ಅಂದ್ರೆ, ಎಲ್ಲ ಒಟ್ಟಿಗೆ ಸಂತೆಯಿಂದ ತಂದ ಸರಕು ಸಾಮಗ್ರಿಗಳನ್ನ ಬಿಡಿಸಿ ಬಿಡಿಸಿ ಸಪರೇಟ್ ಆಗಿ ಅವುಗಳ ಜಾಗಕ್ಕೆ ಇಡೋದು. ಇನ್ನೂ ಸ್ವಲ್ಪ ನಿಮಗೆ ಬಿಡಿಸಿ ಹೇಳಬೇಕು ಅಂದ್ರೆ. ಕಿರಾಣಿ ತಗೆದು ಸ್ಟೋರ್ ರೂಮಲ್ಲಿ ಇಡ್ತೀರಿ. ಕಾಯಿಪಲ್ಲೇ ತಗೆದು ಫ್ರಿಜ್ ಲ್ಲಿ ಇಡ್ತೀರಿ. ಸೋಪ್ ತಗೆದು ಬಾತ್ ರೂಮಲ್ಲಿ ಇಡ್ತೀರಿ. ಹು ಕಾಯಿ ತಗೆದು ದೇವರ ಮನೇಲಿ ಇಡ್ತೀರಿ. ಬಟ್ಟೆ ತಗೆದು ಬೆಡ್ ರೂಮಲ್ಲಿ ಇಡ್ತೀರಿ. ಚಪ್ಪಲಿ ತಗೆದು ಹೊರಗಡೆ ಚಪ್ಪಲಿ ಸ್ಟ್ಯಾಂಡ್ ಲ್ಲಿ ಇಡ್ತೀರಿ. ಹೌದಲ್ವಾ??
ಹಾಗೆ ನಮ್ ಜೀವನ ಕೂಡ ಒಂದ್ ಸಂತೆ ನೆ. ನಾವು ಮಾಡೋ ಮೊದಲನೇ ತಪ್ಪು ಏನಂದ್ರೆ, ಸಂತೆಯಲ್ಲಿ ಸಿಕ್ಕವರಲ್ಲಿ, ಮನಸ್ಸೆಂಬ ಮನೆಯಲ್ಲಿ ಯಾರನ್ನ ಎಲ್ಲಿ ಇಡಬೇಕೋ ಅಲ್ಲಿ ಇಡಲ್ಲ. ಅಯೋಗ್ಯರನ್ನ ನಂಬುತ್ತಿವಿ. ಅನರ್ಹರರನ್ನ ತಲೆ ಮೇಲೆ ಇಟ್ಕೊಂಡು ಓಡಾಡ್ತೀವಿ. ತುಂಬಾ ಜನ ಪರಿಚಯ ಆಗ್ತಾರೆ, ಪರಿಚಯ ಸ್ನೇಹ ಆಗತ್ತೆ. ಕೆಲ ಸ್ನೇಹಗಳು ಸಂತೋಷ ದಿಂದ ಸ್ವಲ್ಪ ದೂರ ಸಾಗ್ತಾ ಬರ್ತವೆ, ಕೆಲ ಸ್ನೇಹಗಳು ಅರ್ಧದಲ್ಲೇ ನಿಂತು ಹೋಗ್ತವೆ. ಯಾರೋ ನಮ್ಮನ್ನ ಬಿಟ್ಟು ಹೋದಾಗ, ಯಾರಿಂದನೋ ನಮಗೆ ಬೇಜಾರ್ ಆದಾಗ. ನನಗೆ ಮೋಸ ಆಯ್ತು ಹಾಗೆ ಹೀಗೆ ಅಂತ ಬೇರೆಯವರ ಮುಂದೆ ಹೇಳ್ಕೊಂಡ ಓಡಾಡ್ತೀವಿ, ಇಲ್ಲ ಒಳಗೊಳಗೇ ಕೊರಗ್ತಿವಿ. ಹೊರಗಡೆ ಚಪ್ಪಲಿ ಸ್ಟ್ಯಾಂಡ್ ಲ್ಲಿ ಇರಬೇಕಾದವರನ್ನ ದೇವರ ಕೋಣೆಗೆ ಕರ್ಕೊಂಡ್ ಬಂದ್ರೆ ಹೀಗೆ ಆಗೋದು ಅಲ್ವಾ?. ಇನ್ನು ಮುಂದೆ ಯಾರಿಂದಾನೋ ಮೋಸ ಹೋಗೋ ಮೊದಲು, ಅನ್ಯಾಯಕ್ಕೋಳಗಾಗೋ ಮೊದಲು, ಅವರು ಪರಿಚಯ ವಾದ ಮೇಲೆ ಅವರ ಬಗ್ಗೆ ತಿಳಿಯಿರಿ. ಅವರು ಯಾವ ಸ್ಥಾನಕ್ಕೆ ಯೋಗ್ಯರೋ ಅರಿಯಿರಿ, ಅಲ್ಲಿ ಇಟ್ಟು ಬಿಡಿ. ಮುಂದೆ ಸಮಸ್ಯೆಯಾಗೋ ಮಾತೆ ಯಿಲ್ಲ.
ಕೊನೆ ಕೊನೆಗೆ ಸ್ವಲ್ಪ ಒಗಟು ಅನಿಸಿದರೆ, ಇನ್ನೊಮ್ಮೆ ಮೊದಲಿನಿಂದ ಓದಿ ತಿಳಿಯುತ್ತೆ.
ಥ್ಯಾಂಕ್ಸ್... ನಿಮ್ಮ ಸಿದ್ದು
Comments
Post a Comment