ಹೊಳೆಯುವ ಮಳೆಯ ಹನಿ ಕೊಳೆಯಾದಾಗ ?

ಮಳೆಗಾಲದ ಸಂಜೆ , ಮುಗಿಲುದ್ದಕ್ಕೂ ಹರಡಿಕೊಂಡ ಮೋಡಗಳು , ಆ ಮೋಡಗಳ ಮದ್ಯ ಮರೆಯಾದ ಕೆಂಪು ಸೂರ್ಯ , ಸೂರ್ಯನನ್ನು ಬಂಧಿಸಿದ ಖುಷಿಯಲ್ಲಿ ಬೀಗುತ್ತಿದ್ದ ಇಳಿ ಸಂಜೆಯ ತಿಳಿ ಬೆಳಕು , ಆಗಾಗ್ಗೆ ಮಿಂಚಿ ಮರೆಯಾಗುತ್ತಿದ್ದ ಮಿಂಚು , ಒಂದೆ ಸಮನೆ ಸುರಿಯುತ್ತಿದ್ದ ಮಳೆ , ಛಳಿಗೆ ಹೆದರದೆ ಮತ್ತಷ್ಟು ಗರಿಗೆದರಿ ನಿಂತ ಗಿಡಮರಗಳು , ಮೂಡಲು ತಯಾರಿ ಮಾಡಿಕೊಳ್ಳುತ್ತಿದ್ದ ಮಳೆಬಿಲ್ಲು , ಅಬ್ಬ ಎಂತಹ ರಮಣೀಯ ದೃಶ್ಯ ಹೇಳ್ತಾ ಹೋದರೆ ಮುಗೀಯೋದೇ ಇಲ್ಲ . ಇಂಥ ಅಪರೂಪವಾದ ಪ್ರಕೃತಿಯ ಸೌಂದರ್ಯ ಸವಿಯುತ್ತ,  ಬೆಚ್ಚನೆಯ ಕಾಪಿ ಹೀರುತ್ತ ಬಾಗಿಲಲ್ಲಿ ನಿಂತ ಆದಿತಿ ಯ ಮುಖದಲ್ಲಿ ಸಂತಸವಿರಲಿಲ್ಲ . ಏನೊ ಗಾಢವಾದ ಚಿಂತೆಯಲ್ಲಿ ತುಂಬ ಹೊತ್ತು ಮುಗಿಲಿನಿಂದ ಜಾರುತ್ತಿದ್ದ ಮುತ್ತಿನಂಥ  ಮಳೆ ಹನಿಗಳನ್ನೆ ದಿಟ್ಟಿಸುತ್ತ ನಿಂತಿದ್ದಳು . ಇದನ್ನ ಗಮನಿಸಿದ ಅವಳ ಅಮ್ಮ ಹತ್ತಿರ ಬಂದು , ಏನಮ್ಮ ಆದಿತಿ ಅಷ್ಟೊತ್ತಿನಿಂದ ಏನು ನೋಡ್ತಾ ನಿಂತಿದಿಯ ? ಎಂದಳು .
ಏನಿಲ್ಲ ಅಮ್ಮ , ಮಳೆ ಹನಿ ನೋಡ್ತಾ ನಿಂತಿದ್ದೆ ಎಂದು ಉತ್ತರಿಸಿದಳು ಆದಿತಿ .
ಏನು ಅಷ್ಟೊಂದು ಗಂಭೀರವಾಗಿ ನೋಡ್ತಿದೀಯ ಯಾವತ್ತೂ ಮಳೆ ಹನಿ ನೋಡೆ ಇಲ್ಲ ಅನ್ನೊ ಹಾಗೆ .
ಹೌದು ಅಮ್ಮ,  ಇಷ್ಟು ದಿನ ಮೋಡದಿಂದ ಜಾರಿ ಭೂಮಿ ತಾಗುವ ಹೊಳೆವ ಹನಿಗಳನ್ನ ನೋಡ್ತಿದ್ದೆ . ಆದರೆ ಇವತ್ತು ಮಣ್ಣಲ್ಲಿ ಬಿದ್ದ ಹನಿ ತನ್ನ ಹೊಳಪನ್ನ ಕಳೆದುಕೊಂಡು , ಹಳ್ಳದ ಕೊಳೆಯ ನೀರಾಗಿ ಹರಿಯೋದನ್ನ ನೋಡ್ತಿದ್ದೆನೆ .
ಅದರಲ್ಲಿ ಏನಮ್ಮ ಮಗಳೆ ವಿಶೇಷ ? ಬಿದ್ದ ಹನಿ ಮಣ್ಣು ತಾಗಿ , ಕೊಳಕಾಗಿ ಹಳ್ಳವಾಗಿ ಹರಿದು , ನದಿಯ ಸಂಘದಲ್ಲಿ ಮತ್ತೆ ಶುದ್ದವಾಗಿ , ಸಮುದ್ರದಲ್ಲಿ ಆವಿಯಾಗೊದು ಇದು ಪ್ರಕೃತಿಯ ನಿಯಮ ಅಷ್ಟೆ .
ಅಮ್ಮನ ಎಲ್ಲ ಮಾತೂ ಕೇಳಿಸಿಕೊಂಡು ಕ್ಷಣ ಹೊತ್ತು ಸುಮ್ಮನಿದ್ದ ಆದಿತಿ ಮತ್ತೆ ಮಾತು ಮುಂದುವರೆಸಿದಳು. . . ಅಮ್ಮ ನೀ ಹೇಳ್ತಿರೋದು ಮೋಡದಿಂದ ಜಾರಿದ ಮಳೆ ಹನಿಗಳ ಬಗ್ಗೆ , ನಾ ಮಾತಾಡ್ತಿರೋದು ತಾಯಿ ಗರ್ಭದಿಂದ ಜಾರಿ ಭೂಮಿಗೆ ಬಿದ್ದ ಮನುಷ್ಯನ ಮನಸೆಂಬ ಹನಿಯ ಬಗ್ಗೆ .
ಅಮ್ಮನಿಗೆ ಅರ್ಥ ಆಗಲಿಲ್ಲ ಸುಮ್ಮನೆ ಮೌನ ಧರಿಸಿ ನಿಂತು ಬಿಟ್ಟಳು .  ಮತ್ತೆ ಆದಿತಿ ಯೇ ಮುಂದುವರೆಸಿದಳು .
ಅಮ್ಮ , ಮನುಷ್ಯ ಜನ್ಮ ತಾಳಿದ ಕ್ಷಣ ಎಷ್ಟು ಶುಭ್ರವಾಗಿ ಹೊಳೆಯುತ್ತದೆ ಮನಸ್ಸು . ಬೆಳೀತಾ ಬೆಳೀತಾ ಹಳ್ಳಕ್ಕಿಂತಲೂ ಕೊಳಕಾದ ಕೆಲವರ ಪರಿಚಯದಿಂದ, ಎದುರಾಗುವ  ಕೆಲ ಪರಿಸ್ತಿತಿಗಳಿಂದ  ಮನುಷ್ಯ ನ ಮನಸ್ಸು ಕೊಚ್ಚೆ ನೀರಿಗಿಂತಲೂ ಕೊಳಕಾಗುತ್ತದೆ . ಮುಂದೆ ಸಂಸಾರದ ನದಿಯಲಿ ಹಾಯ್ದು , ಸಾವು ಎಂಬ ಸಮುದ್ರದಲ್ಲಿ  ಆವಿಯಾಗುತ್ತದೆ ಹೊರತು ಮೊದಲಿದ್ದ ಹೊಳಪು ಬರೋದೆ ಇಲ್ಲ .
ಇಪ್ಪತ್ತೆರಡು ವರ್ಷದ ಕಿರಿಯ ಮಗಳ ಹಿರಿ ಪ್ರಶ್ನೆಗೆ ಉತ್ತರಿಸುತ್ತಾಳೆ ಅಮ್ಮ . ಯಾಕೆ ಮಗಳೆ ಹಾಗಂತಿಯ , ಎದುರಾದ ಪರಿಸ್ತಿತಿ , ಕೆಲವರ  ಪರಿಚಯದಿಂದ ಮನಸ್ಸು ವಿಚಲಿತವಾಗೋದು , ದಾರಿ ತಪ್ಪಿ ನ್ಯಾಯ ನೀತಿ ಮರೆಯೋದು ನಿಜ . ಅದಕ್ಕಂತಲೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ,  ಮಠ ಗುರು ಎಂಬ ದೊಡ್ಡ ದೊಡ್ಡ ನದಿಗಳಿವೆ . ಅಂತಹ ಮಹಾನ್ ನದಿಗಳ ಸಂಘದಿಂದ , ಅವರ ಹಿತ ವಚನದಿಂದ ಎಂತಹ ಕೊಳಕು ಮನಸ್ಸಿದ್ದರೂ ಕೊಂಚವಾದರೂ ಹತೋಟಿಗೆ ಬರುತ್ತದೆ , ಶುದ್ಧವಾಗಿ ಶುಭ್ರವಾಗಿ ಹೊಳೆಯಲು ಪ್ರಯತ್ನಿಸುತ್ತದೆ , ನಿನಗೆ ಆ ಚಿಂತೆ ಬೇಡ ಮಗಳೆ .
ಅಮ್ಮನ ಉತ್ತರದಿಂದ  ತೃಪ್ತಿಯಾಗದ ಆದಿತಿ ಮತ್ತೆ ಪ್ರಶ್ನಿಸುತ್ತಾಳೆ.
ಅಮ್ಮ , ನೀನ್ ಹೇಳೋದು ನಿಜ. ಆದರೆ ನನಗೀಗ ಯೋಚನೆಯಾಗಿದ್ದು ,  ಸಮಾಜ ದ ಕೊಳೆಯನ್ನು ತೊಳೆದು ಶುದ್ಧ ಮಾಡುವ ಮಹಾನ್ ನದಿ ಎಂಬ ಮಠ ಮತ್ತು ಗುರುಗಳ ಬಗ್ಗೆ , ಈಗಿನ ಕೆಲ ಸ್ವಾಮಿ ಸನ್ಯಾಸಿಗಳ ಬಗ್ಗೆ . ಯಾಕೆ ಗೊತ್ತಾ ?
ದಾರಿ ತಪ್ಪಿದ ಮನುಷ್ಯನಿಗೆ ಸರಿ ತಪ್ಪಿನ ತಿಳುವಳಿಕೆ ನೀಡಿ , ನ್ಯಾಯ ನೀತಿ ಭೋದಿಸುವ ಕೆಲ ಮಠ ಮತ್ತು ಗುರುಗಳಲ್ಲೇ ನ್ಯಾಯ ನೀತಿ ಉಳಿದಿಲ್ಲ . ಈಗೆ ಕೆಲ ದಿನಗಳ ಹಿಂದೆ ಒಬ್ಬ ಸ್ವಾಮೀಜಿ ಮೇಲೆ ಹಲವಾರು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದರು , ಆ ಸ್ವಾಮೀಜಿಯನ್ನ ವಶಕ್ಕೆ ಪಡೆದು ಆ ಮಠವನ್ನ ಶೋಧ ಮಾಡಿದರೆ ಅಲ್ಲಿ ಪೊಲೀಸರಿಗೆ ದೊರೆತಿದ್ದು ಮದ್ಯದ ಬಾಟಲಿ , ಕಾಂಡೋಮ್ , ಸ್ಯಾನಿಟರಿ ಪ್ಯಾಡ್ , ನೀಲಿ ಚಿತ್ರದ ಸಿಡಿಗಳು. ಅದೆಲ್ಲ ಹಾಳಾಗಿ ಹೋಗಲಿ ಅಮ್ಮ , ಮಠದ ಆಸ್ತಿಯ ಮೇಲೆ ಅಧಿಕಾರ ವಹಿಸಲು ಅಲ್ಲಿನ ಬಣಗಳ ನಡುವೆ ಜಗಳ ,  ಎದುರಿನವರ ಮುಗಿಸಲು ಪ್ರಸಾದದಲ್ಲಿ ವಿಷ ಬೆರೆಸೋ ವರೆಗೂ ಮುಂದುವರೆದಿವೆ ಈಗಿನ ಕೆಲ ಮಠ ಗಳು . ಅದು ಅವರ ಕರ್ಮ ಅನ್ಕೊಂಡು ಸುಮ್ಮನಾಗ್ತಿನಿ ಅಂದ್ರೆ ಅದೂ ಆಗಲ್ಲ , ಯಾಕಂದರೆ ಅವರ ದ್ವೇಷ ಅಸೂಯೆಗೆ ಬಲಿಯಾಗಿದ್ದು ಅಮಾಯಕ ಭಕ್ತರು.
ಈಗ ಹೇಳಮ್ಮ ಸಮಾಜದ ಕೊಳೆಯನ್ನ ತೊಳೆಯುವ ಮಠ ಗುರು ಎಂಬ ನದಿಗಳೆ ಕಾಮ ಕ್ರೋಧ, ಆಶೆ ಅಸೂಯೆ , ರಾಗ ದ್ವೇಷಗಳಿOದ  ಕೊಳೆಯಾದಾಗ , ನನ್ನ ನಿನ್ನಂತಹ ಸಾಮಾನ್ಯ  ಹನಿಗಳ ಗತಿ ಏನು ?
ಮಗಳ ಪ್ರಶ್ನೆಗೆ ಅಮ್ಮನಲ್ಲಿ ಉತ್ತರವಿರಲಿಲ್ಲ , ಇಬ್ಬರೂ ಮೌನಕ್ಕೆ ಶರಣಾಗಿ ನಿಂತರು , ಹೊರಗಡೆ ಮಳೆ ಧೋ ಎಂದು ಸುರಿಯುತ್ತೆಲೆ ಇತ್ತು , ಅಮ್ಮ ಮಗಳ ಎದೆಯಲ್ಲಿ ಗುಡುಗು ಮಿಂಚುಗಳ ಆರ್ಭಟ ಮುಂದುವರೆದಿತ್ತು .

ಧನ್ಯವಾದಗಳೊಂದಿಗೆ , ನಿಮ್ಮ ಸ್ನೇಹಿತ  . 
ಸಿದ್ದು. ತಾಂಬೆ. 

Comments

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ